ಕೆಳದಿ

ಇಕ್ಕೇರಿಯು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಇದು ಸಾಗರ ಪಟ್ಟಣದಿಂದ ಆರು ಕಿಲೋಮೀಟರ್ ದೂರದಲ್ಲಿದೆ, ಸಹ್ಯಾದ್ರಿಯ ವನರಾಜಿಯ ನಡುವಿನಲ್ಲಿದೆ. ಬೆಂಗಳೂರಿನಿಂದ 400 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗದಿಂದ 76  ಕಿಮೀ ದೂರದಲ್ಲಿದೆ.  ಹತ್ತಿರದ ರೈಲು ನಿಲ್ದಾಣವಾದ ಸಾಗರ (SRF)ದಿಂದ 5 ಕಿಮೀ ದೂರದಲ್ಲಿದೆ.

ಇಕ್ಕೇರಿಯು 1560 ರಿಂದ 1639ರವರೆಗಿನೆ ಶತಮಾನಗಳಲ್ಲಿ ಕೆಳದಿ ಅರಸರ ವೈಭವಾನ್ವಿತ ರಾಜಧಾನಿಯಾಗಿ ಮೆರೆಯಿತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು. ಆದರೂ ಇಕ್ಕೇರಿ ಕೆಳದಿ ಅರಸರ ರಾಜಧಾನಿ ಎಂಬ ಗೌರವವನ್ನು ಬಹಳ ಕಾಲ ಪಡೆದಿತ್ತು.

ಅಘೋರೇಶ್ವರ ದೇವಸ್ಥಾನವು ಹೊಯ್ಸಳ-ಕದಂಬ ಶೈಲಿಯಲ್ಲಿದೆ. ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಇದನ್ನು ಹೊಂಬುಚದ ವೆಂಕಟಯ್ಯ ಎಂಬ ಶಿಲ್ಪಿ ಕಟ್ಟಿದನೆಂದು ದೇಗುಲದಲ್ಲಿನ ಕಲ್ಲಿನ ಹಳೆಗನ್ನಡದ ಬರಹವೊಂದು ಹೇಳುತ್ತದೆ.ಉತ್ತರ-ದಕ್ಷಿಣ ದಿಕ್ಕಿನಲ್ಲಿರುವ ಈ ದೇಗುಲವು ಗರ್ಭಗೃಹ(ಕಲ್ಲಿನ ಶಿವಲಿಂಗ), ಅರ್ಧಮಂಟಪ(ಬಿಳಿ ಕಲ್ಲಿನಿಂದ (ಅಮೃತ ಕಲ್ಲಿನಿಂದ) ಕೆತ್ತಿದ ಸಣ್ಣ ನಂದಿ), ಮುಖಮುಂಟಪ ಮತ್ತು ಎದುರಿಗೆ ನಂದಿಗೆ ಪ್ರತ್ಯೇಕ ಮಂಟಪವನ್ನು ಹೊಂದಿದೆ. ಈ ದೇವಾಲಯದಲ್ಲಿ ೩೨ ಕೈಗಳ ಅಘೋರೇಶ್ವರನ ಉತ್ಸವ ಮೂರ್ತಿಯಿದೆ. ಅರ್ಧಮಂಟಪದ ದ್ವಾರದಲ್ಲಿ ಎರಡೂ ಬದಿಯಲ್ಲಿ  ಎಡಭಾಗದಲ್ಲಿ ಮಹಿಷಮರ್ದಿನಿ, ಭೈರವನ ಕೆತ್ತನೆಗಳಿದ್ದರೆ ಬಲಭಾಗದಲ್ಲಿ ಗಣಪತಿ, ಷಣ್ಮುಖನ ಕೆತ್ತನೆಗಳಿವೆ. ಎದುರಿನ ಮುಖಮಂಟಪ ಕೆತ್ತನೆಯಿರುವ ಕಂಬಗಳ ಆಧಾರದ ಮೆಲೆ ನಿಂತಿದೆ. ದೇಗುಲವು ದ್ರಾವಿಡ ಶೈಲಿಯ ಕಳಸವನ್ನು ಹೊಂದಿದೆ. ದೇಗುಲದ ಪಶ್ಚಿಮದಲ್ಲಿ  ಸ್ವಲ್ಪ ಸಣ್ಣದಾದ ಅಖಿಲಾಂಡೇಶ್ವರಿಯ ದೇಗುಲವಿದೆ. ದೇವಸ್ಥಾನದ ಎದುರು ಕಲ್ಲಿನ ಬೃಹತ್ ಬಸವನ ವಿಗ್ರಹವಿದ್ದು, ಅದರ ಒಂದು ಕಾಲಿನ ಕೆಳಭಾಗದಲ್ಲಿ ಚಿಕ್ಕ ಮಕ್ಕಳು ನುಸುಳುವಷ್ಟು ಜಾಗವಿದ್ದು, ಅದರಲ್ಲಿ ನುಸುಳಿದರೆ ಇಷ್ಟಾರ್ಥ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿಯಿದೆ.

ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನು ಜೊತೆಗೆ ಒಂದು ಚೇಳನ್ನೂ ಕೆತ್ತಲಾಗಿದ್ದು ಆ ಹಲ್ಲಿಗಳು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ, ಆದರೆ ಅಲ್ಲಿರುವ ಚೇಳು ಅವನ್ನು ತಡೆಯುತ್ತದೆ ಎಂಬ ಪುರಾಣವಿದೆ. ದೇವಾಲಯದ ಎರಡೂ ಬದಿಗಳಲ್ಲಿ ಕೆರೆಗಳಿದ್ದು, ಅವುಗಳಿಂದಲೇ ಈ ಊರಿಗೆ ಇಕ್ಕೇರಿ (ಎರೆಡು + ಕೆರೆ = ಇಕ್ಕೆರೆ) ಎಂಬ ಹೆಸರು ಬಂದಿದೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ